ದಾನಧರ್ಮ- ಮುಸ್ಲಿಮನ ಚಹರೆ

ದಾನಧರ್ಮ- ಮುಸ್ಲಿಮನ ಚಹರೆ
                    ಝೈನುದ್ದೀನ್ ಇರ್ಫಾನಿ ಮಾಣೂರ್
                    ಅನು: ಎಪಿಎಂ ಶಮೀರ್
ಮಾನವೀಯತೆಯ ಧರ್ಮವಾದ ಇಸ್ಲಾಮಿನ ಆರ್ಥಿಕ ದರ್ಶನವು ಸಮೂಹದ ಆರ್ಥಿಕ ಭದ್ರತೆಯನ್ನು ಲಕ್ಷ್ಯವಿಟ್ಟಿದೆ. ವಿಶ್ವ ಕಂಡ ಸರಿಸಾಟಿಯಿಲ್ಲದ ಆರ್ಥಿಕ ವ್ಯವಸ್ಥೆಯನ್ನು ಇಸ್ಲಾಂ ಕೊಡುಗೆಯಿತ್ತಿದೆ. ಪ್ರಕೃತಿಯ ಧರ್ಮವಾದ ಇಸ್ಲಾಂ ಧರ್ಮವು ಮನುಕುಲದ ಉನ್ನತಿ ಹಾಗೂ ಅವನತಿಗೆ ಮುಖ್ಯ ಕಾರಣವಾದ ಆರ್ಥಿಕ ಕ್ಷೇತ್ರವನ್ನು ಶ್ರದ್ಧಾಪೂರ್ವಕ ಸಂಭಾಳಿಸುತ್ತದೆ. ಸಂಪತ್ತಿನ ನಿಜವಾದ ಮಾಲಿಕ ಸೃಷ್ಟಿಕರ್ತ ಅಲ್ಲಾಹನೆಂದೂ, ಅದರ ನಿರ್ವಹಣೆ ಮಾತ್ರ ಮನುಷ್ಯನಿಗಿದೆ ಎಂದು ತಿಳಿಹೇಳುವ ಮೂಲಕ, ಸಂಪತ್ತು ಕೆಲವರ ಕೈಯಲ್ಲಿ ಕ್ರೋಢೀಕೃತವಾಗುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಇದಕ್ಕೋಸ್ಕರ ಇಸ್ಲಾಂ ಕಡ್ಡಾಯ ದಾನವಾದ ಝಕಾತ್‍ನ್ನು ಜಾರಿಗೊಳಿಸಿದೆ. ಶ್ರೀಮಂತನ ಔದಾರ್ಯವಲ್ಲ, ಹೊರತು ದರಿದ್ರನ ಹಕ್ಕಾಗಿದೆ ಇಸ್ಲಾಮಿನ ಝಕಾತ್.
ಧನಿಕರ ಸಾಮೂಹಿಕ ಉತ್ತರದಾಯಿತ್ವ ಝಕಾತ್‍ನ ಕಡ್ಡಾಯವಾದ ಅಂಶ ನೀಡುವ ಮೂಲಕ ಕೊನೆಗೊಳ್ಳುವುದಿಲ್ಲ. ಕಾರಣ ಕೆಲ ಪ್ರತ್ಯೇಕ ವಸ್ತುಗಳಲ್ಲಿ ಮಾತ್ರ ಝಕಾತ್ ಇದೆ. ಆ ವಸ್ತುಗಳ ವಿನಾ ಝಕಾತ್ ಇಲ್ಲ ಎಂದು ಭಾವಿಸಿ ಅವುಗಳ ಮಾಲಕರಿಗೆ ಸಮೂಹದಲ್ಲಿ ಯಾವುದೇ ಉತ್ತರದಾಯಿತ್ವವಿಲ್ಲ ಎಂಬ ಧೋರಣೆ ಅರ್ಥಶೂನ್ಯವಾಗಿದೆ. ಮಾತ್ರವಲ್ಲ, ಝಕಾತ್‍ನ ಅಂಶವಾದ ಎರಡೂವರೆ ಶತಮಾನ ವಿತರಣೆ ಬಳಿಕ ಮಿಕ್ಕಿದ್ದಲ್ಲಿ ಧನಿಕರಿಗೆ ಏನು ಬೇಕಾದರೂ ಮಾಡಬಹುದು ಎಂದಾದಲ್ಲಿ ಇಸ್ಲಾಂ ಮಂಡಿಸುವ ಆರ್ಥಿಕ ಸಮತೋಲನ ಸರಿಯಾಗಿ ಜಾರಿಯಾಗಬೇಕೆಂದಿಲ್ಲ. ಆದ್ದರಿಂದಲೇ “ಖಂಡಿತ, ಸಂಪತ್ತಿನಲ್ಲಿ ಝಕಾತ್‍ಗಿಂತಲೂ ದೊಡ್ಡ ಬಾಧ್ಯತೆಗಳಿವೆ” ಎಂದು ಪ್ರವಾದಿ (ಸ) ಹೇಳಿರುವುದು. (ತಿರ್ಮುದಿ)
ತನ್ನ ಹಾಗೂ ಕುಟುಂಬಿಕರ ಉಪಜೀವನಕ್ಕೆ ಅಗತ್ಯವಾಗಿರುವುದನ್ನು ಹೊರತುಪಡಿಸಿ ಮಿಕ್ಕಿದ್ದನ್ನು ದೀನರು ಹಾಗೂ ಬಡಬಗ್ಗರಿಗೆ ದಾನ ಮಾಡಬೇಕು ಎಂದು ಪ್ರವಾದಿ (ಸ) ಹೇಳುತ್ತಾರೆ. ಅಬೂ ಸಈದಿಲ್ ಖುದ್ರಿ (ರ) ರವರ ಉದ್ಧರಣೆಯು ಇದಕ್ಕೆ ಪುಷ್ಟಿ ನೀಡುತ್ತದೆ. ಅವರು ಹೇಳುತ್ತಾರೆ. “ಪ್ರವಾದಿ (ಸ) ಹೇಳಿದರು.: ನಿಮ್ಮಲ್ಲಿ ಯಾರ ಬಳಿ ಅಗತ್ಯಕ್ಕಿಂತ ಹೆಚ್ಚು ವಾಹನವಿದೆಯೋ ಅವರು ಇಲ್ಲದವರಿಗೆ ನೀಡಲಿ, ಆಹಾರ ಅಗತ್ಯಕ್ಕಿಂತ ಹೆಚ್ಚಿದ್ದರೆ ಅದನ್ನು ಇಲ್ಲದವರಿಗೆ ನೀಡಲಿ”. ಅವರು ಹೇಳುತ್ತಾರೆ: ಹಾಗೆ ಪ್ರವಾದಿ (ಸ) ಸಂಪತ್ತಿನ ರೂಪಗಳನ್ನು ಪರಾಮರ್ಶೆ ನಡೆಸಿದಾಗ ಅಗತ್ಯಕ್ಕಿಂತ ಹೆಚ್ಚಿನ ಪಾಲಿನಲ್ಲಿ ನಮಗೆ ಯಾವುದೇ ಹಕ್ಕಿಲ್ಲವೆಂಬುದನ್ನು ನಾವು ಅರ್ಥೈಸಿಕೊಂಡೆವು. (ಮುಸ್ಲಿಂ)
ಪವಿತ್ರ ಖುರಾನ್ ಹಲವು ಸ್ಥಳಗಳಲ್ಲಿ ದಾನಧರ್ಮದ ಪ್ರಾಧಾನ್ಯತೆಯನ್ನು ಒತ್ತಿ ಹೇಳುತ್ತದೆ. “ಅಲ್ಲಾಹನ ಮಾರ್ಗದಲ್ಲಿ ಧನ ವ್ಯಯಿಸಿರಿ. ನಿಮಗೆ ನೀವೇ ಅನಾಹುತ ತಂದುಕೊಳ್ಳಬೇಡಿರಿ.”(2-195).
“ಓ ಸತ್ಯವಿಶ್ವಾಸಿಗಳೇ, ವ್ಯಾಪಾರ, ಗೆಳೆತನ, ಶಿಫಾರಸು ಯಾವುದೂ ಇಲ್ಲದ ಒಂದುದಿನ ಬರುವ ಮುನ್ನವೇ ಈಗ ನಿಮಗೆ ನಾವಿತ್ತುದರಿಂದ ಧರ್ಮ ಕಾರ್ಯಕ್ಕೆ ವೆಚ್ಚ ಮಾಡಿರಿ. ” (2-254)
“ಓ ಸತ್ಯ ವಿಶ್ವಾಸಿಗಳೇ, ನೀವು ಸಂಪಾದಿಸಿದ ಉತ್ತಮ ಸೊತ್ತುಗಳಿಂದಲೂ ಭೂಮಿಯಲ್ಲಿ ನಾವು ಹೊರಡಿಸಿದ ಉತ್ತಮ ಬೆಳೆಗಳಿಂದಲೂ ಖರ್ಚು ಮಾಡಿರಿ.” (2-267)
“ಇರುಳೂ ಹಗಲೂ ಗುಪ್ತವಾಗಿಯೂ ಜಾಹೀರಾಗಿಯೂ ತಮ್ಮ ಧನಗಳನ್ನು ದಾನ ನೀಡುವವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ” (2-274)
“ಸತ್ಯವಿಶ್ವಾಸಿಗಳಿಗೆ ಹೇಳಿರಿ; ಅವರು ನಮಾಝನ್ನು ಸಂಸ್ಥಾಪಿಸಲಿ. ಯಾವುದೇ ಕ್ರಯ ವಿಕ್ರಯವೂ ಗೆಳೆತನವೂ ಪ್ರಯೋಜನಕ್ಕೆ ಬಾರದ ಆ ದಿನ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ನೀಡಿದ ಸಂಪತ್ತಿನಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ” (14-31)
“ಆದುದರಿಂದ ನಿಮ್ಮಿಂದ ಸಾಧ್ಯವಿರುವುದಷ್ಟು ನೀವು ಅಲ್ಲಾಹನನ್ನು ಭಯಪಡಿರಿ. ನೀವು ಆಲಿಸಿರಿ ಅನುಸರಿಸಿರಿ ಮತ್ತು ನಿಮಗೆ ಗುಣಕರವಾಗುವ ರೀತಿಯಲ್ಲಿ ಸಂಪತ್ತನ್ನು ಖರ್ಚು ಮಾಡಿರಿ”(64-16)
ದೈವ ಸಂಪ್ರೀತಿ, ಪರಲೋಕ ಮೋಕ್ಷ ಹಾಗೂ ಸ್ವರ್ಗ ಪ್ರವೇಶ ಲಭಿಸಲು ಕಾರಣವಾಗುವ ವಿಶೇಷ ಕರ್ಮವಾಗಿದೆ ದಾನಧರ್ಮ. ಪವಿತ್ರ ಖುರಾನ್ ಹಾಗೂ ಪವಿತ್ರ ಸುನ್ನತ್ ದಾನಧರ್ಮದ ಹಲವಾರು ಸವಿಶೇಷತೆಗಳನ್ನು ಒತ್ತಿ ಹೇಳಿದೆ. ಅವುಗಳಲ್ಲಿ ಕೆಲವು:
1. ಅಲ್ಲಾಹನ ಕೋಪ ಶಮನ ಮಾಡುವುದು. ಮುಆವಿಯ ಬಿನ್ ಹೈದ (ರ)ರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ: “ಖಂಡಿತ ರಹಸ್ಯವಾದ ದಾನಧರ್ಮ ದಾನಧರ್ಮ ಅನುಗ್ರಹಿಯೂ ಉನ್ನತನೂ ಆದ ಅಲ್ಲಾಹನ ಕೋಪವನ್ನು ತಣಿಸುತ್ತದೆ.” (ಮಜ್‍ಮಉ ಝವಾಇದ್)
2. ಪಾಪ ಮೋಕ್ಷಕ್ಕೆ ಹೇತುವಾಗುತ್ತದೆ. ಪ್ರವಾದಿ (ಸ) ಹೇಳುತ್ತಾರೆ. “ನೀರು ಬೆಂಕಿಯನ್ನು ನಂದಿಸುವಂತೆ ದಾನಧರ್ಮವು ಪಾಪವನ್ನು ದೂರ ಮಾಡುತ್ತದೆ.”(ತಿರ್ಮುದಿ). ಮಾತ್ರವಲ್ಲದೆ, ಪಾಪಮೋಕ್ಷದ ಪ್ರಧಾನ ಕಾರಣವಾಗಿ ದಾನವನ್ನು ಖುರಾನ್ ಪರಿಚಯಿಸುತ್ತದೆ. “ನಿಮ್ಮ ಪ್ರಭುವಿನ ಕ್ಷಮಾದಾನ ಹಾಗೂ ಭೂಮಿ ಮತ್ತು ಆಕಾಶಗಳಷ್ಟು ವಿಶಾಲವಾದ ಸ್ವರ್ಗದ ಕಡೆಗೆ ಧಾವಿಸಿರಿ. ಸ್ವರ್ಗವನ್ನು ಧರ್ಮನಿಷ್ಟರಿಗಾಗಿ ಕಾಯ್ದಿರಿಸಲಾಗಿದೆ. ಅವರು ಸಂತೋóದ ಸಮಯದಲ್ಲೂ ಕಷ್ಟದ ಸಮಯದಲ್ಲೂ ದಾನ ಧರ್ಮ ಮಾಡುವರು.” (3-133,134)
3. ಖಬ್‍ರ್‍ನಲ್ಲಿ ಸಮಾಧಾನವಿರುವುದು. ಪ್ರವಾದಿವರ್ಯರು ಹೇಳುತ್ತಾರೆ: “ಖಂಡಿತ, ದಾನವು ಖಬ್‍ರ್‍ವಾಸಿಗಳಿಗೆ ಖಬ್‍ರಿನ ತಾಪವನ್ನು ಕಡಿಮೆ ಮಾಡುತ್ತದೆ.” (ಬೈಹಖಿ)
4. ನರಕದಿಂದ ಶ್ರೀರಕ್ಷೆ.  ಪ್ರವಾದಿ (ಸ) ಹೇಳಿದರು. “ಒಂದು ಒಣ ಖರ್ಜೂರದ ಸೀಳನ್ನು ನೀಡಿಯಾದರೂ ನೀವು ನರಕವನ್ನು ಭಯಪಡಿರಿ” (ಬುಖಾರಿ, ಮುಸ್ಲಿಂ). ಅಬೂ ಸೀದಿಲ್ ಖುದ್ರಿ (ರ)ರಿಂದ ನಿವೇದನೆ: ಪ್ರವಾದಿ (ಸ) ಸ್ತ್ರೀ ಸಮೂಹಕ್ಕೆ ಹೇಳುತ್ತಾರೆ. “ಸ್ತ್ರೀಯರೇ, ನೀವು ದಾನ ನೀಡಿರಿ. ನಿಮ್ಮನ್ನು ನಾನು ನರಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡಿದ್ದೆನು.” ಆಗ ಅವರ ಕೇಳಿದರು. “ಇದಕ್ಕೆ ಕಾರಣವೇನು ಪ್ರವಾದಿವರ್ಯರೇ?”. ಪ್ರವಾದಿ (ಸ) ಉತ್ತರಿಸಿದರು: “ನೀವು ಶಾಪವಾಕ್ಯವನ್ನು ವರ್ಧಿಸುತ್ತೀರಿ. ಗಂಡನಿಗೆ ಕೃತಘ್ನರಾಗುತ್ತೀರಿ.”(ಬುಖಾರಿ). ಈ ಹದೀಸ್ ವ್ಯಾಖ್ಯಾನಿಸಿ ಇಮಾಮ ಇಬ್ನು ಹಜರ್(ರ) ಬರೆಯುತ್ತಾರೆ. “ಸದಖ ಶಿಕ್ಷೆಯನ್ನು ತಡೆಯುತ್ತದೆ ಹಾಗೂ ಸೃಷ್ಟಿಗಳ ಪಾಪವನ್ನು ಮನ್ನಿಸುತ್ತದೆ ಎಂಬುದಕ್ಕೆ ಈ ಹದೀಸ್ ಪುರಾವೆಯಾಗಿದೆ.” (ಫತ್ಹುಲ್ ಬಾರಿ).
5. ದೈಹಿಕ ಅನಾರೋಗ್ಯ ಶಮನವಾಗುವುದು. ಪ್ರವಾದಿ(ಸ) ಪ್ರಸ್ತಾಪಿಸುತ್ತಾರೆ. “ನಿಮ್ಮಲ್ಲಿನ ರೋಗಿಗಳಿಗೆ ಸದಖ ಮೂಲಕ ಚಿಕಿತ್ಸೆ ನೀಡಿರಿ” (ಬೈಹಖಿ)
6. ಮಾನಸಿಕ ರೋಗಿಗಳಿಗೆ ಶಮನ. ಅಬೂ ಹುರೈರಾ(ರ) ರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ. “ಒಬ್ಬರು ಪ್ರವಾದಿ(ಸ)ರೊಂದಿಗೆ ಹೃದಯ ಕಾಠಿಣ್ಯದ ಬಗ್ಗೆ ಹೇಳುತ್ತಾರೆ. ಆಗ ಅವರು ಹೇಳಿದರು.: ಹೃದಯವು ಮೃದುವಾಗಲು ತಾವು ಬಯಸುತ್ತಿರುವಿರಾದರೆ ನಿರ್ಗತಿಕರಿಗೆ ಆಹಾರ ನೀಡಿರಿ, ಅನಾಥರ ತಲೆ ಸವರಿರಿ” (ಮುಸ್ನದು ಅಹ್ಮದ್).
7. ಸಂಪತ್ತಿನಲ್ಲಿ ಸಮೃದ್ದಿ ಉಂಟಾಗುವುದು. ಅಬೂ ಹುರೈರಾರಿಂದ ನಿವೇದನೆ: ನಬಿ(ಸ) ಹೇಳಿದರು: “ದಾನ ಸಂಪತ್ತನ್ನು ಕಡಿತಗೊಳಿಸಲಾರದು” (ಮುಸ್ಲಿಂ). ಅಲ್ಲಾಹನು ಹೇಳುತ್ತಾನೆ: “ಹೇಳಿರಿ, ನನ್ನ ಪ್ರಭು ತನ್ನ ದಾಸರಲ್ಲಿ ತಾನಿಚ್ಚಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಪರಿಮಿತಗೊಳಿಸುತ್ತಾನೆ ನೀವು (ದೇವಮಾರ್ಗದಲ್ಲಿ) ಏನನ್ನು ಖರ್ಚು ಮಾಡಿದರೂ ಅದಕ್ಕೆ ಬದಲಾಗಿ ಅವನು ನಿಮಗೆ ಇನ್ನಷ್ಟು ಕೊಡುತ್ತಾನೆ” (34-39).
8. ವಿಪತ್ತುಗಳನ್ನು ತಡೆಯುವುದು. ಪ್ರವಾದಿ(ಸ) ಹೇಳುತ್ತಾರೆ. “ಧರ್ಮವು ವಿಪತ್ತನ್ನು ತಡೆಯುತ್ತದೆ.”(ತಬ್‍ರಾನಿ). ಸೂರ್ಯಗ್ರಹಣವುಂಟಾದ ಸಂದರ್ಭದಲ್ಲಿ ಜನರೆಲ್ಲರೂ ಅಸ್ವಸ್ಥರಾದಾಗ ನಬಿ(ಸ) ಅವರಿಗೆ ಹೇಳಿದರು. “ನೀವು ಗ್ರಹಣವನ್ನು ಕಂಡರೆ
ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ. ಅವನನ್ನು ಹೊಗಳಿರಿ. ನಮಾಝ್ ನಿರ್ವಹಿಸಿರಿ. ದಾನ ನೀಡಿರಿ”(ಬುಖಾರಿ). ಈ ಹದೀಸ್ ವ್ಯಾಖ್ಯಾನಿಸಿ ಇಬ್ನು ದಖೀಖಿಲ್ ಈದ್(ರ) ಬರೆಯುತ್ತಾರೆ. ಅಪಾಯಕಾರಿಯಾದ ವಿಪತ್ತುಗಳನ್ನು ತಡೆಯಲು ಸದಖ ನೀಡುವು ಸುನ್ನತ್ತೆಂದು ಇಲ್ಲಿ ವೇದ್ಯವಾಗುತ್ತದೆ. (ಇಹ್‍ಕಾಮುಲ್ ಇಹ್ಕಾಂ)
9.  ಸಂಪತ್ತು ವೃದ್ಧಿಸುವುದು. ಪ್ರವಾದಿ (ಸ) ವರ್ತಕರೊಂದಿಗೆ ಹೇಳಿದರು: “ಓ ವರ್ತಕ ಸಮೂಹವೇ, ಖಂಡಿತ ಪಿಶಾಚಿ ಹಾಗೂ ಆತನ ಸಂಗಡಿಗರು ನಿಮ್ಮ ವ್ಯಾಪಾರದಲ್ಲಿ ಬಂದು ಸೇರುತ್ತಾರೆ. ಆದ್ದರಿಂದ ನೀವು ನಿಮ್ಮ ವ್ಯಾಪಾರದೊಂದಿಗೆ ಸದಖವನ್ನು ಬೆರೆಸಿರಿ”(ತಿರ್ಮುದಿ).
10. ದಾನಿಯು ಅಲ್ಲಾಹನ ಪ್ರೀತಿಗೆ ಪಾತ್ರನಾಗುತ್ತಾನೆ. ಇಬ್ನು ಉಮರ್(ರ) ಹೇಳುತ್ತಾರೆ. ಓರ್ವ ವ್ಯಕ್ತಿ ಪ್ರವಾದಿಯರ ಬಳಿ ಬಂದು ಕೇಳಿದರು. ಅಲ್ಲಾಹನ ದೂತರೇ, ಜನರ ಪೈಕಿ ಅಲ್ಲಾಹನಿಗೆ ಪ್ರೀತಿಪಾತ್ರನಾರು?, ಕರ್ಮಗಳ ಪೈಕಿ ಅಲ್ಲಾಹನಿಗೆ ಇಷ್ಟವಾದುದು ಏನು?. ಅವರು ಹೇಳುತ್ತಾರೆ. “ಜನರಿಗೆ ಹೆಚ್ಚು ಉಪಕಾರಿಯಾದವನನ್ನು ಅಲ್ಲಾಹನು ಬಲು ಇಷ್ಟಪಡುತ್ತಾನೆ. ಒಬ್ಬ ವಿಶ್ವಾಸಿಯನ್ನು ಸಂತುಷ್ಟಿಗೊಳಿಸುವುದು, ಅವನ ಪ್ರಯಾಸವನ್ನು ದೂರೀಕರಿಸುವುದು, ಆತನ ಸಾಲ ತೀರಿಸುವುದು ಹಾಗೂ ಆತನನ್ನು ಹಸಿವು ಮುಕ್ತನನ್ನಾಗಿಸುವು ಅಲ್ಲಾಹನಿಗೆ ಇಷ್ಟವಾದ ಕರ್ಮವಾಗಿದೆ.”(ತಬ್‍ರಾನಿ). ಉಮರ್(ರ) ಹೇಳುತ್ತಾರೆ. “ಕರ್ಮಗಳು ಪರಸ್ಪರ ತಮ್ಮ ಮಹಿಮೆಗಳನ್ನು ಹೇಳುವುದು. ಆಗ ಸದಖ ಹೇಳುತ್ತz.É “ನಾನು ನಿಮ್ಮಲ್ಲಿ ಬಲು ಶ್ರೇಷ್ಠನು’ ” (ಇಬ್ನು ಖುಝೈಮಾ)
11. ಯಥಾರ್ಥ ಪುಣ್ಯ ಲಭಿಸುವುದು. ಅಲ್ಲಾಹು ಹೇಳುತ್ತಾನೆ: “ನಿಮಗೆ ಪ್ರಿಯವಾದ ವಸ್ತುಗಳಿಂದ ನೀವು ವೆಚ್ಚ ಮಾಡುವವರೆಗೂ ನೀವು ಪುಣ್ಯ ಪಡೆಯಲಾರಿರಿ. ನೀವು ಏನೇ ವೆಚ್ಚ ಮಾಡಿದರೂ ಅಲ್ಲಾಹನು ಅದರ ಬಗ್ಗೆ ಚೆನ್ನಾಗಿ ತಿಳಿದಿರುತ್ತಾನೆ ”(3-92). ಇಮಾಂ ಬುಖಾರಿ ಉದ್ಧರಿಸುತ್ತಾರೆ: ಈ ಆಯತ್ ಅವತೀರ್ಣಗೊಂಡಾಗ ಅಬೂ ತಲ್ಹಾ(ರ) ಪ್ರವಾದಿಶ್ರೇಷ್ಠರ ಬಳಿ ಬಂದು ಹೇಳಿದರು. “ಅಲ್ಲಾಹನು ಆತನ ಗ್ರಂಥದಲ್ಲಿ ನಿಮಗೆ ಪ್ರಿಯವಾದುದನ್ನು ದಾನ ಮಾಡಿರಿ” ಎಂದು ಹೇಳುತ್ತಾನೆ. ನನ್ನ ಸಂಪತ್ತಿನಲ್ಲಿ ನನಗೆ ಬಲು ಇಷ್ಟವಾದ ಬೈರೂಹಾಅï ತೋಟವನ್ನು ನಾನು ದಾನ ನೀಡಿದ್ದೇನೆ (ಬುಖಾರಿ). ಪ್ರಸ್ತುತ ಸೂಕ್ತ ಅವತೀರ್ಣಗೊಂಡಾಗ ಝೈದ್ ಬಿನ್ ಹಾರಿಸತ್(ರ) ರವರು ತಮಗಿಷ್ಟವಾದ ಕುದುರೆಯನ್ನು ದಾನ ಮಾಡಿದರು (ಜಾಮಿಉಲ್ ಬಯಾನ್). ಅಬ್ದುಲ್ಲಾ ಬಿನ್ ಉಮರ್ ಹೇಳುತ್ತಾರೆ. “ಪವಿತ್ರ ಖುರಾನಿನ ಪ್ರಸ್ತುತ ಸೂಕ್ತ ಅವತೀರ್ಣಗೊಂಡಾಗ, ಅಲ್ಲಾಹನು ನನಗೆ ನೀಡಿದ ಅನುಗ್ರಹಗಳನ್ನು ಜ್ಞಾಪಿಸಿಕೊಂಡೆನು. ಗುಲಾಮ ಸ್ತ್ರೀಗಳಿಗಿಂತ ಇಷ್ಟವಾದ ಒಂದೂ ಅಂದು ನನ್ನ ಬಳಿ ಇರಲಿಲ್ಲ. ಕೂಡಲೇ ನಾನು ಹೇಳಿದೆನು. ಅಲ್ಲಾಹನ ಪ್ರೀತಿಗೋಸ್ಕರ ನಾನು ಆಕೆಯನ್ನು ದಾಸ್ಯಮುಕ್ತಿಗೊಳಿಸಿದ್ದೇನೆ.”(ಮುಸ್ತದ್ರಕ್).
12. ಅಂತ್ಯ ದಿನದಂದು ಸದಖವು ನೆರಳನ್ನೀಯುವುದು. ಉಖ್‍ಬತ್ ಬಿನ್ ಆಮಿರ್ ಹೇಳುತ್ತಾರೆ: ಪ್ರವಾದಿಯವರು ಹೀಗೆನ್ನುವುದನ್ನು ನಾನು ಕೇಳಿದನು: ಪ್ರತಿಯೋರ್ವರೂ ಅವರು ನೀಡಿದ ಸದಖದ ನೆರಳಿನಡಿಯಲ್ಲಿರÀುತ್ತಾರೆ.(ಮುಸ್ನದ್ ಅಹ್ಮದ್)
13. ದೇವದೂತರ ಪ್ರಾರ್ಥನೆ ಲಭಿಸುತ್ತದೆ. ರಸೂಲ್ (ಸ) ಹೇಳಿದರು. ಪ್ರಭಾತ ವೇಳೆಯಲ್ಲಿ ಇಬ್ಬರು ಮಲಕುಗಳು ಇಳಿದು ಬರುತ್ತಾರೆ.  ಅವರಲ್ಲೊಬ್ಬರು ‘ಅಲ್ಲಾಹನೇ ದಾನ ನೀಡುವವನಿಗೆ ನೀನು ಬದಲಿ ನೀಡು’ ಎಂದೂ ಇನ್ನೊಬ್ಬರು ‘ದಾನ ನೀಡದವನಿಗೆ ಹಾನಿ ಮಾಡು’ ಎಂದು ಪ್ರಾರ್ಥಿಸುತ್ತಿರುತ್ತಾರೆ.(ಬುಖಾಋಇ, ಮುಸ್ಲಿಂ)
14. ಪ್ರತಿಫಲ ದ್ವಿಗುಣವಾಗುವುದು. ಅಲ್ಲಾಹನು ಹೇಳುತ್ತಾನೆ: “ಅಲ್ಲಾಹನಿಗೆ ಉತ್ತಮ ಸಾಲ ನೀಡುವವನು ಯಾರಿದ್ದಾನೆ? ಹಾಗಾದರೆ ಅದನ್ನು ಅಲ್ಲಾಹನು ಧಾರಾಳಪಟ್ಟು ವರ್ಧಿಸುತ್ತಾನೆ. ಅಲ್ಲಾಹನು ಹಿಗ್ಗಿಸುತ್ತಾನೆ, ಕುಗ್ಗಿಸುತ್ತಾನೆ”(2-245). “ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಉಪಮೆ, ಒಂದು ಧಾನ್ಯ ಮೊಳೆತು ಅದರಿಂದ ಏಳು ಟಿಸಿಲೊಡೆದು ಪ್ರತಿಯೊಂದು ಟಿಸಿಲಲ್ಲಿ ತಲಾ ನೂರು ಧಾನ್ಯಗಳು ಬೆಳೆದಂತೆ. ಅಲ್ಲಾಹನು ತಾನಿಚ್ಛಿಸಿದವರಿಗೆ ದ್ವಿಗುಣಗೊಳಿಸುತ್ತಾನೆ”(2-261). “”ದಾನಿಗಳಾದ ಪುರುಷರಿಗೂ, ದಾನಿಗಳಾದ ಸ್ತ್ರೀಯರಿಗೂ ಮತ್ತು ಅಲ್ಲಾನಿಗೆ ಶ್ರೇóಠ ಸಾಲವನ್ನು ನೀಡಿದವರಿಗೆ ಖಂಡಿತವಾಗಿಯೂ ಇಮ್ಮಡಿಯಾಗಿ ಕೊಡಲಾಗುವುದು”(57-18).
15. ಒಂದೇ ದಿನ ದಾನಧರ್ಮದೊಂದಿಗೆ ವೃತಾನುಷ್ಠಾನ, ರೋಗಿಯ ಸಂದರ್ಶನ, ಮಯ್ಯಿತ್ ಹಿಂಬಾಲಿಸುವವರಿಗೆ ಸ್ವರ್ಗವು ಖಚಿತ. ಅಬೂಹುರೈರಾ(ರ) ಹೇಳುತ್ತಾರೆ: ಒಂದು ದಿನ ಪ್ರವಾದಿಯವರು ಸಹಾಬಿಗಳೊಂದಿಗೆ ಕೇಳುತ್ತಾರೆ. ‘ನಿಮ್ಮ ಪೈಕಿ ಉಪವಾಸಿಗರು ಯಾರಿದ್ದಾರೆ?’. ಅಬೂಬಕರ್ ಹೇಳಿದರು: ‘ನಾನು’ ಎಂದು. ಪ್ರವಾದಿಯವರು ಪುನಃ ಕೇಳಿದರು: ಇಂದು ಮಯ್ಯಿತ್‍ನ್ನು ಹಿಂಬಾಲಿಸಿದವರು ಯಾರಿದ್ದಾರೆ?. ಅಬೂಬಕರ್(ರ) ಹೇಳುತ್ತಾರೆ; ನಾನಿದ್ದೇನೆ. ಪ್ರವಾದಿಯವರು ಕೇಳುತ್ತಾರೆ: ಇಂದು ನಿರ್ಗತಿಕನಿಗೆ ಆಹಾರ ನೀಡಿದವರು ಯಾರಿದ್ದಾರೆ?. ಆಗ ಅಬೂಬಕರ್‍ರವರು ‘ನಾನು’ ಎಂದರು. ಪ್ರವಾದಿಯವರ ನಂತರದ ಪ್ರಶ್ನೆ ‘ಇಂದು ರೊಗಿಯನ್ನು ಸಂದರ್ಶಿಸಿದವರು ಯಾರು?’. ಆಗಲೂ ಅಬೂಬಕರ್‍ರವರ ಬಳಿಯಿಂದ ನಾನು ಎಂಬ ಉತ್ತರ ಬಂದಾಗ ಪ್ರವಾದಿಯವರು ‘ಈ ನಾಲ್ಕು ಕಾರ್ಯಗಳು ಒಬ್ಬರ;ಲ್ಲಿ ಮೇಳೈಸಿದರೆ ಆತ ಸ್ವರ್ಗ ಪ್ರವೇಶಿಸದಿರಲಾರ’ (ಮುಸ್ಲಿಂ).
16. ಪ್ರತ್ಯೇಕ ಕವಾಟದ ಮೂಲಕ ಸ್ವರ್ಗ ಪ್ರವೇಶ ಸಾಧ್ಯವಾಗುವುದು. ಅಬೂ ಹುರೈರಾರಿಂದ ನಿವೇದನೆ: ಪ್ರವಾದಿ (ಸ) ಹೇಳುತ್ತಾರೆ: ನಮಾಝ್ ನಿರ್ವಹಿಸುವವರನ್ನು ನಮಾಝ್‍ನ ಕವಾಟದ ಮೂಲಕ ಆಹ್ವಾನಿಸಲಾಗುವುದು. ಈಹಾದ್ ನಡೆಸಿದ ವಿಭಾಗವನ್ನು ಜಿಹಾದ್‍ನ ಕವಾಟದ ಮೂಲಕ ಸ್ವರ್ಗಕ್ಕೆ ಆಹ್ವಾನಿಸಲಾಗುವುದು. ಹಾಗೂ ಸದಖ ನೀಡಿದವರನ್ನು ಸದಖದ ಕವಾಟದ ಮೂಲಕ ಕರೆಯಲಾಗುವುದು.(ಬುಖಾರಿ).
17. ಸರ್ವ ಸತ್ಕರ್ಮಗಳ ಹಾದಿ ಸುಗಮವಾಗುವುದು. “ಯಾರು ದಾನ ನೀಡುತ್ತಾರೆ. ಹಾಗೂ ಅಲ್ಲಾಹನನ್ನು ಭಯಪಡುತ್ತಾನೆ. ಹಾಗೂ ಅತ್ಯುತ್ತಮವಾದುದನ್ನು ಸತ್ಯವೆಂದು ಅಂಗೀಕರಿಸುತ್ತಾನೆ. ಅವನಿಗೆ ನಾವು ಸ್ವರ್ಗಕ್ಕಿರುವ ಹಾದಿ ಸುಗಮಗೊಳಿಸುವೆವು.” (ಖುರಾನ್, 92/5-7). ಸುಗಮವಾದುದು ಎಂಬುದರ ಉದ್ದೇಶ ವಿವಿಧ ಸತ್ಕರ್ಮಗಳಿಗೆ ಮಾರ್ಗದರ್ಶನ ಲಭಿಸುವುದು ಎಂದು ವ್ಯಾಖ್ಯಾನಕಾರರು ಉಲ್ಲೇಖಿಸುತ್ತಾರೆ. (ಖುರ್ತುಬಿ).
18. ದಾನ ನೀಡಿದ್ದು ಎಂದೆಂದಿಗೂ ಶೇಷವಾಗಿರುತ್ತದೆ. ಮನೆಯಲ್ಲಿ ಕೊಯ್ದ ಆಡಿನ ಬಗ್ಗೆ ಅದರಲ್ಲಿ ಏನಾದರೂ ಬಾಕಿಯಿದೆಯೇ? ಎಂದು ಪ್ರವಾದಿ (ಸ) ಆಇಶ(ರ)ರೊಂದಿಗೆ ಕೇಳುತ್ತಾರೆ. ಆಗ ಆಇಶಾರವರು ಆದರ ತೊಡೆಯಲ್ಲದ ಒಂದೂ ಬಾಕಿಯಿಲ್ಲ ಎಂದಾಗ ತೊಡೆಯಲ್ಲದ ಎಲ್ಲವೂ ಬಾಕಿಯಾಯಿತು ಎಂದು ಪ್ರವಾದಿ(ಸ) ಹೇಳುತ್ತಾರೆ.*(ಮುಸ್ಲಿಂ). ಖುರಾನ್ ಹೇಳುತ್ತದೆ: “ನೀವು ನೀಡಿದ ದಾನ ನಿಮಗೇ ನೀಡಿಕೊಂಡ ದಾನ. ಅಲ್ಲಾಹನ ಒಲವನ್ನು ಮಾತ್ರ ಬಯಸಿ ದಾನ ನೀಡಿರಿ. ನಿಮ್ಮ ದಾನದ ಸಂಪೂರ್ಣ ಫಲ ನಿಮಗೆ ಲಭ್ಯ. ನೀವು ಅನೀತಿಗೊಳಗಾಗುವುದಿಲ್ಲ”(2-272).
19. ದಾಸನು ಮಾಲೀಕನಾದ ಅಲ್ಲಾಹನ ಕರಾರು ಪಾಲಿಸಿದಂತೆ. ಸಹಜೀವಿಗಳಿಗೆ ದಾನ ನೀಡುವ ಮೂಲಕ ಸೃಷ್ಟಿಕರ್ತನೊಂದಿಗಿನ ಕರಾರನ್ನು ಮನುಷ್ಯ ಪಾಲಿಸುತ್ತಾನೆ. ಖುರನ್ ಹೇಳುತ್ತದೆ: “ನಿಜವಾಗಿಯೂ ಅ;ಲ್ಲಾಹನು ಸತ್ಯವಿಶ್ವಾಸಿಗಳಿಂದ ಅವರ ತನು_ಧನಗಳನ್ನು ಸ್ವರ್ಗದ ಬದಲಿಗೆ ಖರೀದಿ ಮಾಡುತ್ತಾನೆ”. (9-111)
20. ದಾನಧರ್ಮವು ಅಲ್ಲಾಹನ ಬಗ್ಗೆ ಇರುವ ಒಳ್ಳೆಯ ಧೋರಣೆ ಹಾಗೂ ಸಾತ್ವಿಕ ಈಮಾನಿನ ಲಕ್ಷಣವಾಗಿದೆ. ಒಳ್ಳೆ ಕಾರ್ಯಗಳಿಗೆ ಧನ ವಿನಿಯೋಗ ಮಾಡದಿರುವುದು ಹಾಗೂ ಸಂಪತ್ತು ಕಡಿಮೆಯಾಗುವುದೆಂದು ಭಾವಿಸಿ ದಾನ ನೀಡದಿರುವುದು ಅಲ್ಲಾಹನ ಬಗ್ಗೆ ಇರುವ ಕೆಟ್ಟ ಚಿಂತನೆಯ ಫಲವೆಂದೇ ಭಾವಿಸಬಹುದು ಎಂಬುದನ್ನು ಸ್ಪಷ್ಟಪಡಿಸಿದ ಬಳಿಕ ಇಮಾಂ ಖುರ್ತುಬಿ  ಹೇಳುತ್ತಾರೆ: ದಾಸನು ಅಲ್ಲಾಹನ ಕುರಿತು ಒಳ್ಳೆಯ ಧೋರಣೆ ಇರುವವನಾದರೆ ಸಂಪತ್ತು ಕಡಿಮೆಯಾಗಬಹುದೆಂಬ ಭಯ ಆತನಲ್ಲಿರಲಾರದು. ಕಾರಣ ದಾನಕ್ಕೆ ಬದಲಾಗಿ ಅಲ್ಲಾಹನು ಹೇರಳವಾಗಿ ನೀಡುವನೆಂದು ಅಲ್ಲಾಹನು ಸ್ಪಷ್ಟವಾಗಿ ಹೇಳಿದ್ದಾನೆ. (ಖುರ್ತುಬಿ)



Comments