ಅವಕಾಶವಾದಿ ರಾಜಕಾರಣ ಮತ್ತು ನಿತೀಶ್‍ರ ಮೂರನೇ ಇನ್ನಿಂಗ್ಸ್

ಅವಕಾಶವಾದಿ ರಾಜಕಾರಣ ಮತ್ತು ನಿತೀಶ್‍ರ ಮೂರನೇ ಇನ್ನಿಂಗ್ಸ್
                                                                   ಎಪಿಎಂ ಶಮೀರ್, ಹಲಸೂರು ಬೆಂಗಳೂರು

    ಮೋದಿ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಬಲ್ಲ ಸಮರ್ಥ ಸೇನಾನಿ ಎಂದೇ ಬಿಂಬಿತರಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಜಾತ್ಯತೀತ ನಿಲುವುಗಳಿಗೆ ತಿಲಾಂಜಲಿ ಇಟ್ಟು  ಇದೀಗ ಕೇಸರಿ ಪಾಳೆಯ ಸೇರಿಕೊಂಡಿದ್ದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಓರ್ವ ಸಜ್ಜನ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದ ನಿತೀಶ್ ಅವಕಾಶವಾದಿ ರಾಜಕೀಯದಲ್ಲಿ ಎತ್ತಿದ ಕೈ. ಸಾವರ್ಕರ್ ಪ್ರಣೀತ ರಾಮರಾಜ್ಯದ ಕನಸನ್ನು ಸಾಕ್ಷಾತ್ಕಾರಗೊಳಿಸಲು ನಾಗಾಲೋಟದಿಂದ ಓಡುತ್ತಿರುವ ಭಾಜಪವನ್ನು ಕಟ್ಟಿಹಾಕುವ ವಿಪಕ್ಷಗಳಿಗೆ ಈ ಮೂಲಕ ನಿತೀಶ್ ಶಾಕ್ ಕೊಟ್ಟಿದ್ದಾರೆ.
    2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳ ನಡುವೆ ಹಂಚಿಕೆಯಾದ ಮತಗಳ ದುರ್ಲಾಭ ಪಡೆದ ಭಾಜಪವನ್ನು ಮಣಿಸಲು ಬಿಹಾರದಲ್ಲಿ ಜಾತ್ಯತೀತ ಪಕ್ಷಗಳು ಮಹಾಮೈತ್ರಿಯನ್ನು ರಚಿಸಿದ್ದವು. ಆ ಮೈತ್ರಿಯಲ್ಲಿ ಆಗಷ್ಟೇ ಮೋದಿಯನ್ನು ವಿರೋಧಿಸಿ ಎನ್‍ಡಿಎ ತೊರೆದಿದ್ದ ನಿತೀಶ್‍ರ ಸಂಯುಕ್ತ ಜನತಾದಳ, ಲಾಲೂ ಪ್ರಸಾದರ ರಾಷ್ಟ್ರೀಯ ಜನತಾದಳ ಹಾಗೂ 2014ರ ಲೋಕಸಭಾ ಚುನಾವಣೆ ಹಾಗೂ ಆ ಬಳಿಕ ನಡೆದ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷಗಳು ಕೈ ಜೋಡಿಸಿಕೊಂಡಿದ್ದವು. ಭಾರೀ ಬಹುಮತದೊಂದಿಗೆ ಗೆದ್ದ ಮಹಾಮೈತ್ರಿಯು ಮೋದಿ-ಶಾ ಜೋಡಿಯ ನಿದ್ದೆಗೆಡಿಸಿತ್ತು. 2019 ಚುನಾವಣೆಯುಲ್ಲಿ ಮೋದಿ ವಿರೋಧಿ ಒಕ್ಕೂಟ ರಚನೆಗೊಂಡು ನಿತೀಶ್ ಅದಕ್ಕೆ ನಾಯಕರಾಗುವರು ಎಂದೇ ಊಹಿಸಲಾಗಿತ್ತು. ಜನತಾಪರಿವಾರಗಳು ಒಂದುಗೂಡುವ ಕಾಲ ಸನ್ನಿಹಿತವಾಗಿತ್ತು. ಆದರೆ ಇದೀಗ ನಿತೀಶ್ ಗೋಸುಂಬೆ ಬುದ್ಧಿ ತೋರಿಸುವ ಮೂಲಕ ಮತನೀಡಿದ ಬಿಹಾರದ ಮತದಾರರಿಗೆ ಚೂರಿ ಇರಿದಿದ್ದಾರೆ.
    ಲಾಲೂ ಪ್ರಸಾದರ ಪಕ್ಷವು ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದರೂ ನಿತೀಶರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. 25 ವರ್ಷದ ಶತ್ರುತ್ವದ ಬಳಿಕ ಒಂದಾಗಿದ್ದ ಲಾಲೂ-ನಿತೀಶರ ನಡುವೆ ಹಲವಾರು ಮನಸ್ತಾಪಗಳಿದ್ದರೂ ಮಹಾಮೈತ್ರಿ ಮುಂದುವರೆದಿತ್ತು. ಬಳಿಕ ಎನ್‍ಡಿಎ ಕಡೆ ನಿಧಾನವಾಗಿ ವಾಲತೊಡಗಿದ್ದ ನಿತೀಶ್ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಗೆ ಬೆಂಬಲ ನೀಡಿದರು. ನೋಟುರದ್ಧತಿ ವಿಚಾರವಾಗಿ ಮೋದಿ ಬೆಂಬಲಕ್ಕೆ ನಿಂತಿದ್ದ ಅವರು ಮೋದಿಯನ್ನು ಬಹಿರಂಗವಾಗಿ ಹೊಗಳಿದ್ದರು. ಇದೀಗ ಲಾಲೂ ಕುಟುಂಬವು ಭ್ರಷ್ಟ ಕುಟುಂಬ ಎಂದು ಆರೋಪಿಸಿ ಮಹಾಮೈತ್ರಿಯನ್ನು ಮುರಿದ ನಿತೀಶರಿಗೆ ಚುನಾವಣಾ ಪೂರ್ವದಲ್ಲಿ ಲಾಲೂ ಮೇಲೆ ಭ್ರಷ್ಟಾಚಾರ ಆರೋಪವಿರುವುದು ಗೊತ್ತಿರಲಿಲ್ಲವೇನೋ?. ಕೇವಲ ಅವಕಾಶವಾದಿಯಾಗಿ ರಾಜಕಾರಣ ಮಾಡುವ ನಿತೀಶ್‍ರಂತಹವರಿಗೆ ಪ್ರಬುದ್ಧ ಮತದಾರರೇ ಪಾಠ ಕಲಿಸಬೇಕಾಗಿದೆ.
                 

Comments