ಕಣಿವೆ ರಾಜ್ಯದ ಯಾತ್ರಾ ಅನುಭವಗಳು -ಎಪಿಎಂ ಶಮೀರ್ ಪೆರುವಾಜೆ

ಕಣಿವೆ ರಾಜ್ಯದ ಯಾತ್ರಾ ಅನುಭವಗಳು
            -ಎಪಿಎಂ ಶಮೀರ್ ಪೆರುವಾಜೆ

ಇಸ್ಲಾಮಿಕವಾದ ಸುಂದರ ವಾತಾವರಣವನ್ನು ಹೊಂದಿರುವ ಮತ್ತು ಭೌಗೋಳಿಕವಾಗಿ ಸ್ವರ್ಗದಂತಿರುವ ಕಾಶ್ಮೀರದ ಪ್ರಭೋದನಾರಂಗದ ಭೂತ ಹಾಗೂ ವರ್ತಮಾನವನ್ನರಿಯಲು ಮರ್ಕಿನ್ಸ್ ವಿದ್ಯಾಸಂಸ್ಥೆಯಿಂದ ಪ್ರವಾಸ ಕೈಗೊಂಡ ಐವತ್ತು ಜನರ ತಂಡದಲ್ಲಿ ನಾನೂ ಕೂಡಾ ಇದ್ದೆನು. ಓರ್ವ ವಿದ್ಯಾರ್ಥಿಯು ಕೊನೆ ಕ್ಷಣದಲ್ಲಿ ಪ್ರವಾಸ ತಂಡದಿಂದ ಹಿಂದೆ ಸರಿದಾಗ ಆ ಸ್ಥಾನ ಭರ್ತಿ ಮಾಡಲು ಒತ್ತಾಯಪೂರ್ವಕವಾಗಿ ನನ್ನನ್ನು ಆ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ನನ್ನ ಆತ್ಮೀಯ ಗುರು ಜುನೈದ್ ಖಲೀಲ್ ನೂರಾನಿ ಉಸ್ತಾದರು ‘ಅಲ್ಲಿ ಕಲಿಯಲು ಬಹಳಷ್ಟಿದೆ’ ಎಂದು ಹುರಿದುಂಬಿಸಿದ್ದರಿಂದ ನಾನೂ ಕೂಡಾ ಮಾರ್ಚ್ 4, 2017ರಂದು ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ನಮ್ಮ ಸಂಗಡಿಗರೊಂದಿಗೆ ಹೊರಟು ನಿಂತೆನು.
        ಭತ್ತದ ಕಣಜ ಪಂಜಾಬ್ ಹಾಗೂ ಭೂಲೋಕದ ಸ್ವರ್ಗ ಕಾಶ್ಮೀರವು ನಮ್ಮ ಗಮ್ಯ ಸ್ಥಾನವಾಗಿತ್ತು. ‘ಉತ್ತರ ಸಂಪರ್ಕ ಕ್ರಾಂತಿ’ ಎಕ್ಸ್‍ಪ್ರೆಸ್‍ನಲ್ಲಿ ಚಂಢೀಗಡಕ್ಕೂ ಅಲ್ಲಿಂದ ಬಸ್ ಮುಖಾಂತರ ಕಾಶ್ಮೀರ ಹಾಗೂ ಪಂಜಾಬ್‍ನ ಪಠಾಣ್‍ಕೋಟ್, ಸರ್‍ಹಿಂದ್ ಸಂದರ್ಶನವು ನಮ್ಮ ಯಾತ್ರೆಯ ಇರಾದೆಯಾಗಿತ್ತು. ಚಂಡೀಗಢದಿಂದ ಬಸ್ ಮುಖಾಂತರ ಶ್ರೀನಗರ ಹೊರೆಟೆವು. ಜಮ್ಮು ಮತ್ತು ಶ್ರೀನಗರ ನಡುವಿನ 280 ಕೀ.ಮೀ ದೂರ. ಸಾಗಲು ಇರುವುದು ಕೇವಲ ಒಂದೇ ಒಂದು ದುರ್ಗಮ ದಾರಿ. ಅಲ್ಲಿ ಸಂಚಾರ ವ್ಯತ್ಯಯ ಉಂಟಾದರೆ ಅದರ ಸಂಕಷ್ಟ ಹೇಳತೀರದು. ಅಂತಹ ದುರ್ಗಮ ಹಾದಿಯ ಪ್ರಯಾಣವು ಬೇಗನೇ ಶ್ರೀನಗರ ತಲುಪಲು ಪ್ರಾರ್ಥಿಸುವಂತೆ ಒತ್ತಡ ಹೇರುತ್ತಿತ್ತು. ಬಸ್ಸಿನಲ್ಲಿ 36 ಘಂಟೆಗಳ ಕಾಲ ಒಂದೇ ಸಮನೆ ಕುಳಿತು ಬಳಲಿದ್ದ ಶರೀರ ಹಾಗೂ ಮನಸ್ಸಿಗೆ ಜವಾಹರ್ ಸುರಂಗ (ಟನಲ್) ಬಳಿ ಕಂಡ ಹಿಮಗಡ್ಡೆಗಳು ಮುದ ನೀಡುತ್ತಿತ್ತು. ಹುಡುಗರೆಲ್ಲರೂ ಬಸ್ಸಿನಿಂದ ಇಳಿದು ಹಿಮ ಎರಚಾಟ ಶುರುವಿಟ್ಟಿದ್ದರು. ಜೀವನದಲ್ಲಿ ಪುಸ್ತಕದ ಬದನೆ ಕಾಯಿಯಂತೆ  ಕಂಡಿದ್ದ ಹಿಮವನ್ನು ಸಾಕ್ಷಾತ್ ದರ್ಶಿಸಿದ ನಮಗೆ ಅದು ರೋಚಕ ಅನುಭವವಾಗಿತ್ತು.
        ಸೋಮವಾರ ರಾತ್ರಿ 7 ಗಂಟೆಗೆ ಚಂಡೀಗಢ ತಲುಪಿದ ನಾವು ಮಂಗಳವಾರ  ಪೂರ್ತಿ ಬಸ್ಸಿನಲ್ಲೇ ಕಳೆದೆವು. ಬುಧವಾರ ನಾವು ಕಾಶ್ಮೀರ ತಲುಪುವಾಗ ಸುಮಾರು 10ಘಂಟೆ ವೇಳೆಯಾಗಿತ್ತು. ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷರಾದ ಶೌಕತ್ ಅಲೀ ನಈಮಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಯಾಸೀನ್ ಎಜ್ಯುಕೇಶನಲ್ ಸೊಸೈಟಿ (ಥಿes) ಯ ಅಡಿಯಲ್ಲಿ ಶ್ರೀನಗರದ ಲಾವೈಪೋರ್‍ನಲ್ಲಿ  ಕಾರ್ಯಾಚರಿಸುತ್ತಿರುವ ದುಬೈ ಇಂಟರ್‍ನ್ಯಾಷನಲ್ ಸ್ಕೂಲ್ ಬಳಿಯ ಅದಾನ್ ರೆಸ್ಟೋರೆಂಟ್ ಎಂಬ ವಸತಿ ಸಮುಚ್ಚಯವನ್ನು ಗೊತ್ತುಪಡಿಸಲಾಗಿತ್ತು. ಭೀಕರ ಚಳಿಯಲ್ಲಿ ಮಡುಗಟ್ಟಿದ್ದ ನಮಗೆ ವಾಸ್ತವ್ಯಕ್ಕಾಗಿ ಒಂದು ರೂಂ ಹಾಗೂ ಅಲ್ಲಿನ ಬೆಚ್ಚನೆಯ ಹಾಸಿಗೆ ಹಾಗೂ ಹೊದಿಕೆಗಳು ದೊರೆತಾಗ ಸ್ವರ್ಗವೇ ಸಿಕ್ಕಂತಾಗಿತ್ತು. ಬಿಸಿ ನೀರಿನಲ್ಲಿ ಬೇಗ ಬೇಗನೇ ಸ್ನಾನ ಮಾಡಿ ಪಕ್ಕದಲ್ಲೇ ಇದ್ದ ಸ್ಕೂಲ್‍ಗೆ ಹೋಗಿ ನಮ್ಮವರೇ ಆಗಿದ್ದ ಅಲ್ಲಿನ ಅಧ್ಯಾಪಕ ವೃಂದದವರೊಂದಿಗೆ ಸಂಪರ್ಕ ಬೆಳೆಸಿಕೊಂಡೆವು. ಬಳಿಕ ಎಲ್ಲರೂ ಒಂದಾಗಿ ಬಸ್ ಹತ್ತಿ ಗುಲ್ಮರ್ಗ್‍ಗೆ ಹೊರಟೆವು.
    ‘ಗುಲ್ಮರ್ಗ್’ ಎಂಬುದು ಕಾಶ್ಮೀರದ ಪ್ರಧಾನ ವಿನೋದ ಕೇಂದ್ರಗಳಲ್ಲೊಂದು. ಗುಲ್ಮರ್ಗ್ ಹೋದರೇನೇ ಕಾಶ್ಮೀರ ಯಾತ್ರೆ ಸಂಪೂರ್ಣ ಎನ್ನುವ ಮಟ್ಟಿಗೆ ಅದು ಹೆಸರುವಾಸಿ. ಸಮುದ್ರ ಮಟ್ಟದಿಂದ ಸುಮಾರು 8690 ಅಡಿ ಎತ್ತರದಲ್ಲಿರುವ ಈ ಹಿಮಾಲಯನ್ ಶಿಖರವು ಸದಾ ಹಿಮಾವೃತವಾಗಿರುತ್ತದೆ. ಸೊನ್ನೆ ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶವಿರುವ ಗುಲ್ಮರ್ಗ್ ಒಂದು ನೈಸರ್ಗಿಕವಾದ ಫ್ರೀಜûರ್ ಎಂದರೆ ಅತಿಶಯೋಕ್ತಿಯಾಗಲಾರದು. ಶ್ರೀನಗರದಿಂದ ಸುಮಾರು 50 ಕಿ.ಮೀ ದೂರ ಸಾಗಿದರೆ ಸಿಗುವ ಈ ಶಿಖರದ ಹಿಂದಿನ ಹೆಸರು ‘ಗೌರಿ ಮಾರ್ಗ್’ ಎಂದಾಗಿತ್ತು ಎಂದು ಒಬ್ಬರು ಹೇಳಿದ್ದರು. ವಾಟರ್ ರೆಸಿಸ್ಟೆಂಟ್ ಕೋಟು, ಶೂ ಹಾಗೂ ಗ್ಲೌಸ್ ಧರಿಸಿದರೆ ಮಾತ್ರ ಅಲ್ಲಿ ನೆಟ್ಟಗೆ ನಡೆಯಲು ಸಾಧ್ಯ. 200 ರೂ ಕೊಟ್ಟು ಗೌನು, ಗ್ಲೌಸು, ಶೂ ಬಾಡಿಗೆ ಪಡೆದು ಅದನ್ನು ಧರಿಸಿ ಹಿಮದಲ್ಲಿ ಚೆಲ್ಲಾಟ ಆಡಿದೆವು. ಗೆಳೆಯರೆಲ್ಲರೂ ಕೂಡಾ ಸೆಲ್ಫಿಗೋಸ್ಕರ ಡೈವ್ ಹೊಡೆಯುವುದು, ಹಿಮದಲ್ಲಿ ಉರುಳಾಡುವುದು ಹೀಗೆ ಮಜಾ ಅನುಭವಿಸಿದರು.
    ಅಲ್ಲಿಂದ ಹಿಂತಿರುಗಿ ಬರುವಾಗ ತಂಗ್ ಮಾರ್ಗ ಎಂಬ ಹಿಮಾವೃತ ಪ್ರದೇಶಕ್ಕೆ ಭೇಟಿಯಿತ್ತು, ಸಾಯಂಕಾಲ ಶೌಕತ್ ಅಲಿ ಉಸ್ತಾದರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಒಂದು ದಅವಾ ಕಾಲೇಜಿಗೆ ಭೇಟಿಯಿತ್ತೆವು. ಥಿes ನ ಅಧ್ಯಾಪಕ ವೃಂದದ ಸದಸ್ಯರಾದ ಕಾಶ್ಮೀರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಬೀಬುರ್ರಹ್ಮಾನ್ ಎಂಬ ತರುಣ ನಮ್ಮನ್ನು ಅಲ್ಲಿಗೆ ಕರೆದೊಯ್ದರು. ದಅವಾ ಕಾಲೇಜಿನಲ್ಲಿ ಕಲಿಯುತ್ತಿರುವ 25 ರಷ್ಟು, ಉದ್ದವಾದ ಕಾಶ್ಮೀರಿ ಫೈರಾನ್ ಧರಿಸಿ ಅದರೊಳಗೆ ‘ಕಾಂಗಿಡಿ’ ಎಂಬ ಕೆಂಡ ತುಂಬಿಸಿದ ಮಡಕೆಯನ್ನು ಹೊತ್ತು ನಡೆಯುವ (ಅದು ಅಲ್ಲಿನ ಸಂಸ್ಕøತಿ) ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿರತರಾಗಿದ್ದುದನ್ನು ಕಂಡಾಗ ಅತೀವ ಸಂತೋಷವಾಗಿತ್ತು. ಖಲೀಲ್ ತಂಙÐಳ್‍ರವರ ಗರಡಿಯಲ್ಲಿ ಪಳಗಿದ ‘ಅದನಿ’ ದ್ವಯರು ಅಲ್ಲಿ ಮುದರ್ರ್ರಿಸರಾಗಿದ್ದರು. ನಮ್ಮೆಲ್ಲರನ್ನೂ ಮದರಸದೊಳಗೆ ಕೂರಿಸಿ ಹಬೀಬ್ ಸರ್ ರವರು ಅಲ್ಲಿನ ರೋಚಕ ಅನುಭವಗಳನ್ನು ಬಿಚ್ಚ ತೊಡಗಿದರು.
    ಅವರು ಹೇಳಿದರು : ಕೆಲವು ವರ್ಷಗಳ ಹಿಂದೆ ಶೌಕತ್ ಉಸ್ತಾದರು ಕಾಶ್ಮೀರಕ್ಕೆ ಮೊದಲ ಭೇಟಿಯಿತ್ತಾಗ ಅಲ್ಲಿ ಕ್ರೈಸ್ತ ಮಿಷನರಿಗಳು ಅಮಾಯಕ ಕಾಶ್ಮೀರಿಗಳ ಈಮಾನ್ ಕಸಿಯುತ್ತಿದ್ದುದನ್ನು ಕಾಣುತ್ತಾರೆ. ಅಶಾಂತಿ, ಯುದ್ದೋನ್ಮಾದದಿಂದ   ಬಸವಳಿದ ಕಾಶ್ಮೀರಿ ಹುಡುಗರನ್ನು ಮಿಷನರಿ ಶಾಲೆಗೆ ಸೇರಿಸಿ ಅವರ ಇಸ್ಲಾಮಿನ ಬಾಲ ಪಾಠವನ್ನೇ ಕಸಿಯುತ್ತಿರುವುದನ್ನು ಕಂಡ ಶೌಕತ್ ಉಸ್ತಾದರು ಅದಕ್ಕೆ ಪ್ರತಿಯಾಗಿ ತಮ್ಮ ಕುಟುಂಬವನ್ನು ತ್ಯಜಿಸಿ ಕಾಶ್ಮೀರಕ್ಕೆ ತೆರಳಿ ಶಾಲೆ-ಮದ್ರಸಾಗಳನ್ನು ಸ್ಥಾಪಿಸಿದರಂತೆ. ಕ್ರೈಸ್ತ ಮಿಷನರಿಗಳು ತಮ್ಮ ವೆಬ್ ಸೈಟ್‍ವೊಂದರಲ್ಲಿ ಪ್ರಕಟಿಸಿದಂತೆ 1990ರ ಬಳಿಕ 25000 ಕ್ಕೂ ಹೆಚ್ಚು ಕಾಶ್ಮೀರಿ ಮುಸ್ಲಿಮರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದರಂತೆ!. (ಇದನ್ನು ಹಬೀಬುರ್ರಹ್ಮನ್ ಹೇಳಿದಾಗ ನಿಜಕ್ಕೂ ಶಾಕ್ ಆದೆವು). ಶಾಂತಿ, ಸಹಬಾಳ್ವೆ ಬಯಸುವ ಕಾಶ್ಮೀರಿ ತಂದೆ ತಾಯಿಗಳು ಕ್ರೈಸ್ತರ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದರೆ, ಮಿಷನರಿಗಳು ಅವರ ಈಮಾನನ್ನೇ ಖೋತಾ ಮಾಡುತ್ತಿದ್ದರಂತೆ. ಪೂಂಚ್ ಎಂಬಲ್ಲಿ 3000 ಕ್ಕೂ ಹೆಚ್ಚು ಮುಸ್ಲಿಂ ಬಾಲಕರಿದ್ದ ಒಂದು ಕ್ರೈಸ್ತಾ ಶಾಲೆಯ ನೇರಾ ಎದುರಲ್ಲೇ ಶೌಕತ್ ಉಸ್ತಾದರು ದೇಶ ಪ್ರೇಮ, ಭಾರತೀಯತೆ ಭೋದಿಸುವ ಒಂದು ಶಾಲೆ ತೆರೆದಾಗ 2000 ಕ್ಕೂ ಹೆಚ್ಚು ಮಕ್ಕಳು ಕ್ರೈಸ್ತರ ಶಾಲೆಯಿಂದ ಈ ಶಾಲೆಗೆ ವರ್ಗಾವಣೆಗೊಂಡಿದ್ದರಂತೆ!. ಅಂದರೆ, ಅಲ್ಲಿನವರಿಗೆ ಶಾಂತಿ ಬೇಕು. ಅಶಾಂತಿ ಪ್ರಿಯರು ಕೆಲವೇ ಕೆಲವು ಜನ. ಅಲ್ಲಿ ಅವರನ್ನು ನೇರ ಮಾರ್ಗಕ್ಕೆ ತರುವವರಿಲ್ಲ. ದೇಶ ವಿರೋಧಿ ಭಾವನೆ ಹೊಂದಿರುವವರನ್ನು ಶ್ರೀನಗರ ಪರಿಸರದಲ್ಲಿ ಮಾತ್ರ ಕಾಣಬಹುದು. ಅನ್ನ ಹಳಸಿದೆ, ನಾಯಿ (ಮಿಶನರಿ) ಹಸಿದಿದೆ ಎಂಬ ಪರಿಸ್ಥಿತಿ ಅಲ್ಲಿಯದು. ಇದೀಗ ಶೌಕತ್ ನಈಮಿ ಉಸ್ತಾದರ ನೇತೃತ್ವದಲ್ಲಿ 30 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ತಲೆಯೆತ್ತಿ ನಿಂತಿದೆ ಎಂಬುವುದು ಹೆಮ್ಮೆಯ ಸಂಗತಿ. ನಿಜಕ್ಕೂ ಉಸ್ತಾದರು ಅಲ್ಲಿ ನಡೆಸುತ್ತಿರುವ ಶೈಕ್ಷಣಿಕ ಕ್ರಾಂತಿ ಮೆಚ್ಚಲೇಬೇಕಾಗಿದೆ.
    ಕಾಶ್ಮೀರ ಹಾಗೂ ಕಾಶ್ಮೀರಿಗಳ ಶ್ರೇಯಾಭಿವೃದ್ಧಿಗಾಗಿ ನಮ್ಮ ಕೈಲಾಗುವುದನ್ನು ಮಾಡಬೇಕು ಎಂಬ ಉತ್ಕಟ ವಾಂಛೆಯನ್ನು ಮನಸ್ಸಿನಲ್ಲಿ ತುಂಬಿ ಬಸ್ ಹತ್ತಿ ರೂಮ್‍ಗೆ ಮರಳಿದೆವು. ಬಸ್‍ನಲ್ಲಿ ಯಾತ್ರಾ ಮಧ್ಯೆ ಕಾಶ್ಮೀರದ ಸ್ಥಿತಿಗತಿಗಳ ಬಗ್ಗೆ ವಿಶಾಲ ಚರ್ಚೆಗಳು ಯಾತ್ರಾ ನಾಯಕ ಜಅಫರ್ ನೂರಾನಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.
    ಮರುದಿನ ಗುರುವಾರ ಬೆಳಗಿನ ಉಪಹಾರ ಮುಗಿಸಿ ಬಹಳ ಎತ್ತರದಲ್ಲಿರುವ ಚರಾರ್-ಎ-ಷರೀಫ್ ಎಂಬ ಕಾಶ್ಮೀರದ ಆಧ್ಯಾತ್ಮಿಕ ಶ್ರದ್ದಾಕೇಂದ್ರಕ್ಕೆ ಹೊರಟು ನಿಂತೆವು. ಸೂಫಿ ಸರಣಿಯ ಪ್ರಮುಖರಾಗಿದ್ದ ನೂರುದ್ದೀನ್ ನೂರಾನಿ ಶಾ ವಲಿಯ್ಯುಲ್ಲಾಹಿಯವರು ಅಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿದ್ದಾರೆ. ಆಲಂ ದಾರೇ- ಕಾಶ್ಮೀರ್ (ಕಾಶ್ಮೀರದ ಧ್ವಜ ವಾಹಕ) ಎಂದೇ ಖ್ಯಾತರಾಗಿದ್ದ ಮಹಾತ್ಮರು ಕ್ರಿ.ಶ 1337 ರಲ್ಲಿ ಜನಿಸಿದರು. ಕವಿತೆಗಳ ಮೂಲಕ ಇಸ್ಲಾಮಿನ ಪ್ರಚಾರ ಕೈಗೊಂಡ ಅವರ ಅಂಕಿತ ನಾಮ ನುಂದ್-ರೇಶಿ ಎಂದಾಗಿತ್ತು. ಶೈಖುಲ್ ಆಲಂ  ಎಂದು ಜನರು ಆದರದಿಂದ ಕರೆಯುತ್ತಿದ್ದರು. ಕಾಶ್ಮೀರದ ಇಸ್ಲಾಮಿಕ ಇತಿಹಾಸದಲ್ಲಿ ಅವರ ಹೆಸರಿಲ್ಲದಿದ್ದರೆ ಆ ಚರಿತ್ರೆ ಅಪೂರ್ಣ. 1440 ರಲ್ಲಿ  ಇಹಲೋಕ ತ್ಯಜಿಸಿದ  ಮಹಾನರ ದರ್ಗಾ ಷರೀಫ್ ಬುದ್ಗಾಮ್ ಜಿಲ್ಲೆಯಲ್ಲಿದೆ. ಅನೇಕ ಸಂತರನ್ನು ಅವರು ಕಾಶ್ಮೀರಕ್ಕೆ ಸಮರ್ಪಿಸಿದ್ದರು. ಅಲ್ಲಿ ಝಿಯಾರತ್ ಮಾಡಿ ಪುನೀತಗೊಂಡು ಹೊರಗೆ ಬರುವಾಗ ಅಲ್ಲಿನ ಓರ್ವ ನಾಗರಿಕರನ್ನು ಮಾತಿಗೆಳೆದಾಗ  ಅಲ್ಲಿನ ಇತಿಹಾಸಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. 1995 ರಲ್ಲಿ ಸೇನೆ ಹಾಗೂ ಪ್ರತ್ಯೇಕ ವಾದಿಗಳ ನಡುವಿನ ಕಾಳಗದಲ್ಲಿ ಚರಾರ್-ಎ-µರೀಫ್ ಶಿಥಿಲವಾಗಿತ್ತಂತೆ!. ಬಳಿಕ ಅಲ್ಲಿ ಸರ್ಕಾರವು ಅದನ್ನು ಜೀರ್ಣೋದ್ಧಾರ ಮಾಡಿತು ಎಂದು ಅವರು ಹೇಳಿದರು. ಶಾಂತಿ-ಸಹಬಾಳ್ವೆಯ  ಮೂರ್ತಿಗಳಾಗಿದ್ದ ಸಂತರ ಸಮ್ಮುಖದಲ್ಲೇ ಉಗ್ರರು ಇಸ್ಲಾಮಿನ ಹೆಸರಿಗೆ ಮಸಿ ಬಳಿದದ್ದನ್ನು ಕೇಳುವಾಗ ಅದ್ಯಾಕೋ ಮನಸ್ಸು ನೋಯುತ್ತದೆ.  ಅಲ್ಲಿಂದ ಯುಸ್‍ಮಾರ್ಗ್ ಎಂಬ ಹಿಮಾವೃತ ಪ್ರದೇಶಕ್ಕೆ ತೆರಳಿ ಅಲ್ಲಿ ಕಾವಲು ಕಾಯುತ್ತಿದ್ದ ಸೈನಿಕರೊಂದಿಗೆ ಸೆಲ್ಫಿ ತೆಗೆದು ಸಂಭ್ರಮಿಸಿದೆವು.
    ಅಂದೇ ಹಝ್ರತ್ ಬಾಲ್‍ಗೆ ಹೋಗುವ ನಮ್ಮ ಆಸೆ ಈಡೇರಲಿಲ್ಲ. ಬೆಳಗ್ಗೆ 9 ಘಂಟೆ ಬಳಿಕ ಅಲ್ಲಿಗೆ ಭಾರೀ ಗಾತ್ರದ ವಾಹನಗಳಿಗೆ ನಿಷೇಧವಿರುವುದರಿಂದ ಮರುದಿನ ಬೆಳಿಗ್ಗೆ ಬೇಗನೆ ಹೊರಡಲು ತೀರ್ಮಾನಿಸಿದೆವು.
    ಹಝ್ರತ್ ಬಾಲ್ ಮಸೀದಿ ಕಾಶ್ಮೀರದ ಪ್ರಧಾನ ಆಧ್ಯಾತ್ಮಿಕ ಕೇಂದ್ರ. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲವiರ ಪವಿತ್ರ ಕೇಶ (ಮೊಯೇ ಮುಖದ್ದಸ್) ವನ್ನು  ಅಲ್ಲಿ ಸಂರಕ್ಷಿಸಿಡಲಾಗಿದೆ. ವಿಶ್ವ ವಿಖ್ಯಾತ ದಾಲ್ ಸರೋವರಕ್ಕೆ ಹೊಂದಿಕೊಂಡಿರುವ ಆ ಮಸೀದಿಗೆ ತಲುಪಲು ನಮ್ಮ ಮನಸ್ಸು ಹಾತೊರೆಯುತ್ತಿತ್ತು. ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಶಅರೇ ಮುಬಾರಕ್ ಇರುವ ಆ ಮಸೀದಿಯ ಬಗ್ಗೆ ಬಹಳ ಹಿಂದಿನಿಂದಲೂ ಕೇಳಿದ್ದೆವು. ಅದನ್ನು ಕಾಣುವ ಭಾಗ್ಯಕ್ಕಾಗಿ ಹಲವಾರು ಬಾರಿ ಹಪಹಪಿಸಿದ್ದೆವು. ಆದ್ದರಿಂದ ಸಾಕ್ಷಾತ್ ಆ ಮಸೀದಿಗೆ ಕಾಲಿಡುತ್ತಿರುವಾಗ ಬಹಳ ಸಂತೋಷ ಉಂಟಾಗುತ್ತಿತ್ತು. ನಮ್ಮ ಪ್ರಾಂಶುಪಾಲರಾದ ಜಅಫರ್ ನೂರಾನಿ ಉಸ್ತಾದರ ನೇತೃತ್ವದಲ್ಲಿ ಅಲ್ಲಿ ಬುರ್ದಾ, ಸ್ವಲಾತ್‍ಗಳನ್ನು ಹೇಳಿ ಪ್ರಾರ್ಥಿಸಿದೆವು. ನಮ್ಮ ಬುರ್ದಾ ಆಲಾಪನೆಯ ಚಿತ್ರವನ್ನು ಆ ಮಸೀದಿಯ ಪ್ರಮುಖ ವ್ಯಕ್ತಿಯೊಬ್ಬರು ತನ್ನ ಮೊಬೈಲ್‍ನಲ್ಲಿ ಕ್ಲಿಕ್ಕಿಸುತ್ತಿದ್ದರು. ದುಆ ಬಳಿಕ ನಮ್ಮ ಬಳಿಕ ಬಂದ ಅವರು ನಮ್ಮೆಲ್ಲರೊಂದಿಗೆ ನಿಂತು ಫೋಟೊ ತೆಗೆಸಿಕೊಂಡು, ನಮಗೂ ಮಸೀದಿಯೊಳಗೆ ಫೋಟೊ ಕ್ಲಿಕ್ಕಿಸಲು ಅನುಮತಿ ನೀಡಿದರು. ಸಾಮಾನ್ಯವಾಗಿ ಅಲ್ಲಿ ಚಿತ್ರ-ಚಲನಚಿತ್ರಗಳಿಗೆ ನಿರ್ಬಂಧವಿದೆ. ಆದರೆ ಅವರು ನಮಗಾಗಿ ಅದಕ್ಕೆ ಅನುಮತಿ ನೀಡಿದರು. ಒಂದೇ ಒಂದು ಕೊರಗು ಏನೆಂದರೆ, ಶಅರೇ-ಮುಬಾರಕ್ ದರ್ಶನ ನಮಗೆ ಸಾಧ್ಯವಾಗಲಿಲ್ಲ ಎಂಬುದಾಗಿತ್ತು. ವರ್ಷದಲ್ಲಿ ಕೆಲ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಅದನ್ನು ತೋರಿಸಲಾಗುತ್ತಿದೆಯಂತೆ.
    ಹಝ್ರತ್ ಬಾಲ್ ಮಸೀದಿಯಲ್ಲಿರುವ ಶಅರೇ ಮುಬಾರಕನ್ನು ಸೈಯ್ಯದ್ ಅಬ್ದುಲ್ಲಾ ಎಂಬವರು 1635ರಲ್ಲಿ ಬಿಜಾಪುರದಿಂದ ತರುತ್ತಾರೆ. ಅವರ ಕಾಲದ ಬಳಿಕ ಅವರ ಪುತ್ರ ಸೈಯ್ಯದ್ ಹಾಮಿದ್ ಎಂಬವರು ನೂರುದ್ದೀನ್ ಎಂಬ ಆ ಕಾಲದ ಪ್ರಮುಖ ಉದ್ಯಮಿಗೆ ನೀಡುತ್ತಾರೆ. ಇದನ್ನರಿತ ಮೊಘಲ್ ಸಾಮ್ರಾಟ ಔರಂಗಝೇಬರು ನೂರುದ್ದೀನ್‍ರನ್ನು ಬಂಧಿಸಿ, ಆ ಪವಿತ್ರ ಕೇಶವನ್ನು ಅಜ್ಮೀರ್ ದರ್ಗಾಕ್ಕೆ ರವಾನಿಸುತ್ತಾರೆ. 1700 ರಲ್ಲಿ ರಾಜರು ಅದನ್ನು ನೂರುದ್ದೀನ್‍ಗೆ ಹಿಂದಿರುಗಿಸಿ, ಅವರಿಗೆ ಬಿಡುಗಡೆಯ ಭಾಗ್ಯ ನೀಡುತ್ತಾರೆ. ಕೆಲ ದಿನಗಳಲ್ಲಿ ನೂರುದ್ದೀನರು ನಿಧನರಾಗುತ್ತಾರೆ. ಅವರ ಸಂಬಂಧಿಕರು ಅದನ್ನು ಒಂದು ಸ್ಥಳದಲ್ಲಿಡುತ್ತಾರೆ. ಆ ಸ್ಥಳವೇ ಹಝ್ರತ್ ಬಾಲ್ ಮಸೀದಿ. 1963 ಡಿಸೆಂಬರ್ 26 ರಂದು ಆ ಶಅರೇ ಮುಬಾರಕ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ರಾಷ್ಟ್ರಾದ್ಯಂತ ತಲ್ಲಣ ಸೃಷ್ಟಿಸಿತ್ತು. ಅವಾಮಿ ಆಕ್ಷನ್ ಕಮಿಟಿ ಎಂಬ ಸಂಘಟನೆಯು ಅದನ್ನು 1964 ಜನವರಿ 4 ರಂದು ಪತ್ತೆ ಮಾಡುತ್ತದೆ. ಈ ಘಟನೆಯನ್ನು ಅಲ್ಲಿನವರು ನಮಗೆ ವಿವರಿಸಿದರು.
    ಬಳಿಕ ಅಲ್ಲಿಂದ ನೇರವಾಗಿ ಕಾಶ್ಮೀರದಲ್ಲಿ ಇಸ್ಲಾಂ ಪ್ರಚಾರ ಮಾಡಿದ ಮೊದಲಿಗ ಶಾ ಹಮದಾನ್ ವಲಿಯವರ ಮಸೀದಿಗೆ, ಪೀರ್ ದಸ್ತಗೀರ್ ಅಬ್ದುಲ್ ಖಾದಿರ್ ಗೀಲಾನಿಯವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಖಾನಿಯಾರ್-ಎ-ಷರೀಫ್, ಸೋಪೊರ್‍ನಲ್ಲಿರುವ ಶಾ ಮಖ್ದೂಂರವರ ದರ್ಗಕ್ಕೂ (ಇವರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಕಾಶ್ಮೀರದಲ್ಲಿ ಇಸ್ಲಾಮಿನ ಅಭ್ಯುದಯ ಎಂಬ ಲೇಖನದಲ್ಲಿ ವಿವರಿಸಲಾಗುವುದು.) ಭೇಟಿಯಿತ್ತೆವು. ಏಕ ಕಾಲಕ್ಕೆ 33,000 ಜನರಿಗೆ ನಮಾಝ್ ಮಾಡಲು ಅನುಕೂಲವಿರುವ ಕಾಶ್ಮೀರದ ಅತೀ ದೊಡ್ಡ ಮಸೀದಿ ಜಾಮಿಆ ಮಸೀದಿಗೆ ಹೋದಾಗ ಅದಕ್ಕೆ ಬೀಗ ಜಡಿಯಲಾಗಿತ್ತು. ಕಾಶ್ಮೀರದಲ್ಲಿ ಅತೀ ಹೆಚ್ಚು ಸೇನೆ ಮತ್ತು ನಾಗರಿಕರ ನಡುವೆ ಕಾಳಗ ಅಲ್ಲೇ ನಡೆಯುವುದರಿಂದ ಹಾಗೂ ಅಂದು ಕಾಳಗ ನಡೆದಿದ್ದರಿಂದ ಮಸೀದಿಗೆ ಬೀಗ ಜಡಿಯಲಾಗಿತ್ತು ಎಂದು ನಮ್ಮ ಮಾರ್ಗದರ್ಶಿಯಾಗಿದ್ದ ಇರ್ಷಾದ್ ಎಂಬ ಕಾಶ್ಮೀರಿ ತಿಳಿಸಿದರು. ಇನ್ನು ಅಲ್ಲಿನ ನಿಷಾತ್ ಗಾರ್ಡನ್, ಟುಲಿಪ್ ಗಾರ್ಡನ್‍ಗಳು ಭಾರೀ ಹಿಮದಿಂದ ಮುಚ್ಚಿ ಹೋಗಿದ್ದವು. ದಾಲ್ ಸರೋವರದಲ್ಲಿ ವಿಕ್ಟೋರಿಯ ಬೋಟ್‍ನಲ್ಲಿ ಕೂರುವ ಆಸೆಗೆ ಹಿಮಪಾತವು ತಣ್ಣೀರೆರಚಿತ್ತು. ಅಲ್ಲಿಂದ ನೇರವಾಗಿ ಗಂಡರ್‍ಬಾಲ್ ಜಿಲ್ಲೆಯಲ್ಲಿರುವ ಶ್ರೀನಗರದಿಂದ 87 ಕಿ.ಮೀ ಈಶಾನ್ಯ ಭಾಗದಲ್ಲಿರುವ ಸೋನಾಮಾರ್ಗ್‍ಗೆ ತೆರಳಿದೆವು. ಸಮುದ್ರ ಮಟ್ಟದಿಂದ ಸುಮಾರು 9200 ಅಡಿ ಎತ್ತರದಲ್ಲಿರುವ ಆ ಹಿಮ ಶಿಖರಗಳಲ್ಲಿ ಸೈನಿಕರೊಂದಿಗೆ ಕೆಲ ಕಾಲ ಕಳೆದೆವು. ಅಂದು ಸಾಯಂಕಾಲ ಚಂಡೀಘಡ್ ದಾರಿ ಹಿಡಿಯುವ ಯೋಚನೆಯಲ್ಲಿದ್ದ ನಮಗೆ ಜಮ್ಮು-ಶ್ರೀನಗರ ಮಧ್ಯೆಯಿರುವ ಏಕೈಕ ದುರ್ಗಮ ದಾರಿ ಹಿಮಪಾತದಿಂದ ಮುಚ್ಚಿ ಹೋಗಿದೆ ಎಂಬ ಸುದ್ದಿ ತಿಳಿದಾಗ ಗತಿಯಿಲ್ಲದೆ ನಮ್ಮ ರೂಮ್‍ಗೆ ಹಿಂತಿರುಗಿದೆವು.


Comments